ಗಾಗಾಭಟ್ಟ
ಮೀಮಾಂಸಕ. ಭಾಟ್ಟಚಿಂತಾಮಣಿಯ ಕರ್ತೃ. ನಿಜನಾಮಧೇಯ ವಿಶ್ವೇಶ್ವರ, ತಂದೆ ದಿನಕರಭಟ್ಟ. ಪಿತಾಮಹ ರಾಮಕೃಷ್ಣ ಭಟ್ಟ. ಭಟ್ಟ ನಾರಾಯಣ ಈತನ ಮೂಲಪುರುಷನೆಂದೂ ಈತ ಸಂನ್ಯಾಸಾಶ್ರಮ ಸ್ವೀಕರಿಸಿದ್ದರೂ ಛತ್ರಪತಿ ಶಿವಾಜಿಯ ಪ್ರಾರ್ಥನೆ ಮೇರೆಗೆ ಅದನ್ನು ತ್ಯಜಿಸಿದನೆಂದೂ ಈತನ ಗ್ರಂಥದಿಂದ ತಿಳಿದುಬರುತ್ತದೆ. ಈತನ ಭಾಟ್ಟಚಿಂತಾಮಣಿ ಗ್ರಂಥ ಪುರ್ವಮೀಮಾಂಸಾ ಸೂತ್ರದ ವ್ಯಾಖ್ಯಾನ ರೂಪವಾಗಿದ್ದು ಕೇವಲ ತರ್ಕಪಾದ ಮಾತ್ರ ಉಪಲಬ್ಧವಿದೆ. ವಿಚಾರಸರಣಿ ಯಲ್ಲಿ ಈತ ಕುಮಾರಿಲಭಟ್ಟನನ್ನು ಅನುಕರಿಸಿದ್ದಾನೆಂಬುದು ಗ್ರಂಥ ವಿಷಯದಿಂದ ಸ್ಪಷ್ಟವಾಗುತ್ತದೆ. ಜೈಮಿನೀಯ ಸೂತ್ರಗಳಿಗೆ ಕುಸುಮಾಂಜಲಿ ಎಂಬ ವೃತ್ತಿಗ್ರಂಥವನ್ನೂ ಶಿವಾಜಿಯನ್ನು ಕುರಿತಂತೆ ಶಿವಾರ್ಕೋದಯವೆಂಬ ಗ್ರಂಥವನ್ನೂ ಈತ ಬರೆದಿದ್ದಾನೆಂದು ಈತನ ಮಾತಿನಿಂದಲೇ ತಿಳಿದುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ